ಮಧುರೈ ಭಾರತದ ತಮಿಳುನಾಡಿನ ಪ್ರಮುಖ ನಗರವಾಗಿದೆ ಇದು ಮಧುರೈ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಜನಪ್ರಿಯ ಹಿಂದೂ ಯಾತ್ರಾ ಕೇಂದ್ರವಾಗಿದೆ. == ಇತಿಹಾಸ == ಮಧುರೈನಲ್ಲಿ ಕನಿಷ್ಠ ಕ್ರಿ.ಪೂ. ೩ ನೇ ಶತಮಾನದಿಂದ ಜನವಸತಿ ಇದೆ. ಮೆಗಾಸ್ತನೀಸ್ ಕ್ರಿ.ಪೂ. ೩ ನೇ ಶತಮಾನದ ಸಮಯದಲ್ಲಿ ಮಧುರೈಗೆ ಭೇಟಿ ನೀಡಿರಬಹುದು. ಅವರ ಖಾತೆಗಳಲ್ಲಿ ನಗರವನ್ನು "ಮೆಥೋರಾ" ಎಂದು ಉಲ್ಲೇಖಿಸಲಾಗಿದೆ. "ಮೆಥೋರಾ" ಉತ್ತರ ಭಾರತದ ನಗರವಾದ ಮಥುರಾವನ್ನು ಉಲ್ಲೇಖಿಸುತ್ತದೆ ಎಂದು ನಂಬುವ ಕೆಲವು ವಿದ್ವಾಂಸರು ಈ ದೃಷ್ಟಿಕೋನವನ್ನು ವಿರೋಧಿಸುತ್ತಾರೆ, ಏಕೆಂದರೆ ಇದು ಮೌರ್ಯ ಸಾಮ್ರಾಜ್ಯದಲ್ಲಿ ದೊಡ್ಡ ಮತ್ತು ಸ್ಥಾಪಿತ ನಗರವಾಗಿತ್ತು. ಮಧುರೈ ಕೌಟಿಲ್ಯನ (ಕ್ರಿ.ಪೂ.೩೭೦-೨೮೩) ಅರ್ಥಶಾಸ್ತ್ರದಲ್ಲಿಯೂ ಸಹ ಉಲ್ಲೇಖಿಸಲ್ಪಟ್ಟಿದೆ. ಮಥುರೈಕ್ಕಾಂಚಿಯಂತಹ ಸಂಗಮ ಸಾಹಿತ್ಯವು ಪಾಂಡ್ಯರ ರಾಜವಂಶದ ರಾಜಧಾನಿಯಾಗಿ ಮಧುರೈನ ಪ್ರಾಮುಖ್ಯತೆಯನ್ನು ದಾಖಲಿಸುತ್ತದೆ. ಮಧುರೈಯನ್ನು ರೋಮನ್ ಇತಿಹಾಸಕಾರರಾದ ಪ್ಲಿನಿ ದಿ ಯಂಗರ್ (೬೧ – ಶ. ೧೧೨ ) , ಟಾಲೆಮಿ (ಶ. ೯೦ – ಶ.೧೬೮), ಗ್ರೀಕ್ ಭೂಗೋಳಶಾಸ್ತ್ರಜ್ಞ ಸ್ಟ್ರಾಬೊ (ಕ್ರಿ.ಪೂ.೬೪/೬೩ ಶ. ೨೪), ಮತ್ತು ಎರಿಥ್ರಿಯನ್ ಸಮುದ್ರದ ಪೆರಿಪ್ಲಸ್‌ನ ಕೃತಿಗಳಲ್ಲಿಯೂ ಉಲ್ಲೇಖಿಸಲಾಗಿದೆ. == ಕಲಭ್ರ ರಾಜವಂಶ == ಸಂಗಮ ಯುಗದ ನಂತರ, ಮಧುರೈ ಸೇರಿದಂತೆ ಇಂದಿನ ತಮಿಳುನಾಡಿನ ಹೆಚ್ಚಿನ ಭಾಗವು ಕಲಭ್ರ ರಾಜವಂಶದ ಆಳ್ವಿಕೆಗೆ ಒಳಪಟ್ಟಿತು. ಇದನ್ನು ಸುಮಾರು ಕ್ರಿ.ಶ. ೫೯೦ ರಲ್ಲಿ ಪಾಂಡ್ಯರು ಹೊರಹಾಕಿದರು. == ಪಾಂಡ್ಯ ರಾಜವಂಶ == ಕ್ರಿ.ಶ. ೫೯೦ ಮತ್ತು ಕ್ರಿ.ಶ. ೯೨೦ ನಡುವೆ ಪಾಂಡ್ಯ ರಾಜರ ಸರಣಿಯು ಮಧುರೈ ಅನ್ನು ಆಳಿತು. == ಚೋಳ ರಾಜವಂಶ == ೯ ನೇ ಶತಮಾನದ ಆರಂಭದಲ್ಲಿ ಚೋಳ ರಾಜವಂಶದಿಂದ ಪಾಂಡ್ಯರನ್ನು ಮಧುರೈನಿಂದ ಹೊರಹಾಕಲಾಯಿತು. ೧೩ ನೇ ಶತಮಾನದ ಆರಂಭದವರೆಗೂ ನಗರವು ಚೋಳರ ನಿಯಂತ್ರಣದಲ್ಲಿತ್ತು. ಎರಡನೆಯ ಪಾಂಡ್ಯರ ಸಾಮ್ರಾಜ್ಯವು ಮಧುರೈ ಅನ್ನು ಅದರ ರಾಜಧಾನಿಯಾಗಿ ಸ್ಥಾಪಿಸಲಾಯಿತು. == ದೆಹಲಿ ಮತ್ತು ಮಧುರೈ ಸುಲ್ತಾನರು == ಕುಲಶೇಖರ ಪಾಂಡ್ಯರ (ಕ್ರಿ.ಶ.೧೨೬೮-೧೩೦೮) ಮರಣದ ನಂತರ, ಮಧುರೈ ದೆಹಲಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತು. ಮಧುರೈ ನಂತರ ದೆಹಲಿಯ ಸುಲ್ತಾನರ ಆಡಳಿತದಿಂದ ಬೇರ್ಪಟ್ಟಿತು ಮತ್ತು ಕ್ರಿ.ಶ.೧೩೭೮ ರಲ್ಲಿ ವಿಜಯನಗರ ಸಾಮ್ರಾಜ್ಯದಿಂದ ಕ್ರಮೇಣ ಸ್ವಾಧೀನಪಡಿಸಿಕೊಳ್ಳುವವರೆಗೂ ಸ್ವತಂತ್ರ ಸಾಮ್ರಾಜ್ಯವಾಗಿ ಕಾರ್ಯನಿರ್ವಹಿಸಿತು. == ವಿಜಯನಗರ ರಾಜವಂಶ ಮತ್ತು ಮಧುರೈ ನಾಯಕರು == ಕ್ರಿ.ಶ.೧೫೫೯ ರಲ್ಲಿ ನಾಯಕರ ಅಡಿಯಲ್ಲಿ ಮಧುರೈ ವಿಜಯನಗರದಿಂದ ಸ್ವತಂತ್ರವಾಯಿತು. ನಾಯಕರು ಮಧುರೈ ಮತ್ತು ತಿರುಚಿರಾಪಳ್ಳಿ ನಡುವೆ ರಾಜಧಾನಿಯನ್ನು ಬದಲಾಯಿಸುವುದರೊಂದಿಗೆ ೨೦೦ ವರ್ಷಗಳ ಕಾಲ ಮಧುರೈನಲ್ಲಿ ಆಳ್ವಿಕೆ ನಡೆಸಿದರು. ನಾಯಕರ ಆಳ್ವಿಕೆಯು ಕ್ರಿ.ಶ.೧೭೩೬ ರಲ್ಲಿ ಕೊನೆಗೊಂಡಿತು. ಮಧುರೈ ಅನ್ನು ಪದೇ ಪದೇ ದಾಳಿ ಮಾಡಿದ ಬಳಿಕ ಚಂದಾ ಸಾಹಿಬ್ (ಕ್ರಿ.ಶ.೧೭೪೦– ೧೭೫೪) ವಶಪಡಿಸಿಕೊಂಡರು. (ಕ್ರಿ.ಶ.೧೭೨೫- ೧೭೬೪) ೧೮ ನೇ ಶತಮಾನದ ಮಧ್ಯದಲ್ಲಿ ಆರ್ಕಾಟ್ ನವಾಬ್ ಮತ್ತು ಮುಹಮ್ಮದ್ ಯೂಸುಫ್ ಖಾನ್ ವಶಪಡಿಸಿಕೊಂಡರು. == ಬ್ರಿಟಿಷರ ವಸಾಹತುಶಾಹಿ ಅವಧಿ == ೧೮೦೧ ರಲ್ಲಿ, ಮಧುರೈ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ನೇರ ನಿಯಂತ್ರಣಕ್ಕೆ ಒಳಪಟ್ಟಿತು ಮತ್ತು ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷ್ ಸರ್ಕಾರವು ಮೀನಾಕ್ಷಿ ದೇವಸ್ಥಾನಕ್ಕೆ ದೇಣಿಗೆಗಳನ್ನು ನೀಡಿತು ಮತ್ತು ಅವರ ಆಳ್ವಿಕೆಯ ಆರಂಭಿಕ ಭಾಗದಲ್ಲಿ ಹಿಂದೂ ಹಬ್ಬಗಳಲ್ಲಿ ಭಾಗವಹಿಸಿತು. ನಗರವು ೧೯ ನೇ ಮತ್ತು ೨೦ ನೇ ಶತಮಾನದಲ್ಲಿ ರಾಜಕೀಯ ಮತ್ತು ಕೈಗಾರಿಕಾ ಸಂಕೀರ್ಣವಾಗಿ ವಿಕಸನಗೊಂಡು ದೊಡ್ಡ ಮಧುರೈ ಜಿಲ್ಲೆಯ ಜಿಲ್ಲಾ ಕೇಂದ್ರವಾಯಿತು. ೧೮೩೭ ರಲ್ಲಿ, ದೇವಾಲಯದ ಸುತ್ತಲಿನ ಕೋಟೆಗಳನ್ನು ಬ್ರಿಟಿಷರು ಕೆಡವಿದರು. ಕಂದಕವನ್ನು ಬರಿದುಮಾಡಲಾಯಿತು ಮತ್ತು ವೇಲಿ, ಮಾರಟ್ ಮತ್ತು ಪೆರುಮಾಳ್ ಮೇಷ್ಟಿ ಬೀದಿಗಳು ಎಂಬ ಅವಶೇಷಗಳನ್ನು ಹೊಸ ಬೀದಿಗಳನ್ನು ನಿರ್ಮಿಸಲು ಬಳಸಲಾಯಿತು. ನಗರವನ್ನು ಕ್ರಿ.ಶ.೧೮೬೬ ರಲ್ಲಿ ಪುರಸಭೆಯಾಗಿ ಸ್ಥಾಪಿಸಲಾಯಿತು. ಸರ್ಕಾರದ ಅಧಿಕಾರಿಗಳ ನೇರ ಆಡಳಿತದ ಅಡಿಯಲ್ಲಿ ಮಧುರೈ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಭೂ ಸೀಲಿಂಗ್ ಮತ್ತು ತೆರಿಗೆ ಸಂಗ್ರಹಣೆಯಲ್ಲಿ ಪುರಸಭೆಯ ಸ್ಥಾಪನೆಯ ಹಿಂದಿನ ಅವಧಿಯಲ್ಲಿ ಬ್ರಿಟಿಷ್ ಸರ್ಕಾರವು ಆರಂಭಿಕ ತೊಡಕುಗಳನ್ನು ಎದುರಿಸಿತು. ನಗರವನ್ನು ಜಿಲ್ಲೆಯ ಜೊತೆಗೆ ಕ್ರಿ.ಶ.೧೮೮೦ ಮತ್ತು ೧೮೮೫ ನಡುವೆ ಮರುಪರಿಶೀಲಿಸಲಾಯಿತು. ತರುವಾಯ, ಎರಡು ಜಿಲ್ಲೆಗಳಲ್ಲಿ ಐದು ಪುರಸಭೆಗಳನ್ನು ರಚಿಸಲಾಯಿತು. ಸ್ಥಳೀಯ ಆಡಳಿತಕ್ಕಾಗಿ ಆರು ತಾಲೂಕು ಮಂಡಳಿಗಳನ್ನು ಸ್ಥಾಪಿಸಲಾಯಿತು. ಮಧುರೈ ನಗರದಲ್ಲಿ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಯಿತು. ಇದು ಜಿಲ್ಲಾ ಅಧೀಕ್ಷಕರ ಪ್ರಧಾನ ಕಛೇರಿಯನ್ನು ಹೊಂದಿದೆ. ಬ್ರಿಟಿಷರ ಅಡಿಯಲ್ಲಿ ಮಧುರೈ ಅಭಿವೃದ್ಧಿ ಹೊಂದಿತು. ೧೯೨೧ ರಲ್ಲಿ ಮಧುರೈನಲ್ಲಿ, ಬ್ರಿಟಿಷರ ಆಳ್ವಿಕೆಯ ಭಾರತದಲ್ಲಿ ಭಾರತೀಯ ರಾಷ್ಟ್ರೀಯತೆಯ ಪ್ರಮುಖ ನಾಯಕರಾದ ಮಹಾತ್ಮ ಗಾಂಧಿಯವರು ಕೃಷಿ ಕಾರ್ಮಿಕರು ಧರಿಸುವುದನ್ನು ನೋಡಿದ ನಂತರ ಮೊಟ್ಟಮೊದಲ ಬಾರಿಗೆ ಸೊಂಟದ ಬಟ್ಟೆಯನ್ನು ತಮ್ಮ ಉಡುಗೆಯ ವಿಧಾನವಾಗಿ ಅಳವಡಿಸಿಕೊಂಡರು. ಮಧುರೈನಲ್ಲಿನ ಸ್ವಾತಂತ್ರ್ಯ ಚಳುವಳಿಯ ನಾಯಕರಲ್ಲಿ ಎನ್‌ಎಮ್‌ಆರ್‌ ಸುಬ್ಬರಾಮನ್, ಕರುಮುಟ್ಟು ತ್ಯಾಗರಾಜನ್ ಚೆಟ್ಟಿಯಾರ್ ಮತ್ತು ಮೊಹಮ್ಮದ್ ಇಸ್ಮಾಯಿಲ್ ಸಾಹಿಬ್ ಸೇರಿದ್ದಾರೆ. 1939 ರಲ್ಲಿ ಸಿ. ರಾಜಗೋಪಾಲಾಚಾರಿ ನೇತೃತ್ವದಲ್ಲಿ ಮದ್ರಾಸ್ ಪ್ರಾಂತ್ಯದ ಸರ್ಕಾರವು ಅಂಗೀಕರಿಸಿದ ದೇವಾಲಯ ಪ್ರವೇಶ ಅಧಿಕಾರ ಮತ್ತು ನಷ್ಟ ಪರಿಹಾರ ಕಾಯಿದೆಯು ಹಿಂದೂ ದೇವಾಲಯಗಳಿಗೆ ಶಾಣರು ಮತ್ತು ದಲಿತರನ್ನು ಪ್ರವೇಶಿಸುವುದನ್ನು ನಿಷೇಧಿಸುವ ನಿರ್ಬಂಧಗಳನ್ನು ತೆಗೆದುಹಾಕಿತು. ೧೯೩೯ ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎ. ವೈದ್ಯನಾಥ ಅಯ್ಯರ್ ಅವರು ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ದೇವಾಲಯ ಪ್ರವೇಶ ಚಳವಳಿಯನ್ನು ಮೊದಲು ಮುನ್ನಡೆಸಿದರು. == ಉಲ್ಲೇಖಗಳು ==